ಫೈನಾನ್ಸ್ ಸಿಬ್ಬಂದಿ ಅಮಾನವೀಯತೆ: 3 ತಿಂಗಳ ಮಗು ಸಮೇತ ಕುಟುಂಬ ಬೀದಿಗೆ!
ಬೆಳಗಾವಿ: ಫೈನಾನ್ಸ್ ಕಿರುಕುಳದಿಂದಾಗಿ ಒಂದು ಇಡೀ ಕುಟುಂಬ ಮೂರು ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಡೆದಿದೆ.
ಚಿಕ್ಕೋಡಿಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿಯ ವಿರುದ್ಧ ಈ ಆರೋಪ ಕೇಳಿಬಂದಿದೆ. ಹನುಮಂತ ಪಾಟೀಲ್ ಎಂಬುವವರು ತಮ್ಮ ತಂದೆ ಶ್ರೀಕಾಂತ್ ಪಾಟೀಲ್ ಅವರ ಹೃದಯ ಶಸ್ತ್ರಚಿಕಿತ್ಸೆಗಾಗಿ ಮನೆ ಅಡವಿಟ್ಟು ಸುಮಾರು ₹20 ಲಕ್ಷ ಸಾಲ ಪಡೆದಿದ್ದರು. ಆದಾದ ಬಳಿಕ ತಂದೆಯ ನಿಧನ ಮತ್ತು ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಕಳೆದ ಏಳು ತಿಂಗಳಿಂದ ಸಾಲದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ.
ಸುಮಾರು ಏಳು ಲಕ್ಷ ರೂ. ಬಾಕಿ ಇದ್ದ ಹಿನ್ನೆಲೆಯಲ್ಲಿ ಏಕಾಏಕಿ ಬಂದ ಫೈನಾನ್ಸ್ ಸಿಬ್ಬಂದಿ ಮನೆಯಲ್ಲಿದ್ದ ಬಟ್ಟೆ, ಪಾತ್ರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊರತೆಗೆಯಲು ಬಿಡದೆ ಮನೆಗೆ ಬೀಗ ಹಾಕಿ ಜಪ್ತಿ ಮಾಡಿದ್ದಾರೆ. ಇದರಿಂದಾಗಿ ಹನುಮಂತ ದಂಪತಿಯ ಮೂರು ತಿಂಗಳ ಹಸುಗೂಸು ಸೇರಿದಂತೆ ಐವರು ಕುಟುಂಬಸ್ಥರು ರಾತ್ರಿಯಿಡೀ ಮನೆಯಿಂದ ಹೊರಗೆ ಕಾಲ ಕಳೆದಿದ್ದಾರೆ. ಚಳಿಯಿಂದ ಬಳಲಿದ ಮಗು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ
ಘಟನೆ ಕುರಿತು ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮಾನವೀಯ ದೃಷ್ಟಿಯಿಂದ ಸಮಸ್ಯೆ ಬಗೆಹರಿಸಲು ಆಗ್ರಹ ಕೇಳಿಬರುತ್ತಿದೆ.

Comments
Post a Comment