ಹರಿಹರ ಪಂಚಮಸಾಲಿ ಪೀಠದಲ್ಲಿ ಅವ್ಯವಹಾರ: ವಚನಾನಂದ ಸ್ವಾಮೀಜಿ ಉಚ್ಚಾಟನೆ; ಟ್ರಸ್ಟಿಗಳಿಂದ ದಿಢೀರ್ ನಿರ್ಧಾರ
ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಾಡಲು ಟ್ರಸ್ಟಿಗಳು ನಿರ್ಣಯ ಕೈಗೊಂಡಿದ್ದಾರೆ. ಟ್ರಸ್ಟಿಗಳ ಈ ನಿರ್ಧಾರಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ. ಧರ್ಮದರ್ಶಿಗಳಿಗೆ ಚಪ್ಪಲಿ ಪ್ರದರ್ಶಿಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ಹರಿಹರದ ಪಂಚಮಸಾಲಿ ಪೀಠದಲ್ಲಿ ಅವ್ಯವಹಾರ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಜೋರಾಗಿದ್ದು, ಪೀಠಾಧಿಪತಿ ಸ್ಥಾನದಿಂದ ವಚನಾನಂದ ಸ್ವಾಮೀಜಿಯನ್ನು ಉಚ್ಚಾಟನೆ ಮಾಡಲು ಟ್ರಸ್ಟಿಗಳು ನಿರ್ಧಾರ ಕೈಗೊಂಡಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಪೀಠದಲ್ಲಿ ಲೆಕ್ಕ ಕೊಡಿ ಅಭಿಯಾನ ನಡೆಯುತ್ತಿತ್ತು. ಸೋಮವಾರ ಈ ಬಗ್ಗೆ ಟ್ರಸ್ಟಿಗಳು ಸಭೆ ನಡೆಸಿದ್ದು, 15 ಟ್ರಸ್ಟಿಗಳ ಪೈಕಿ 13 ಮಂದಿ ಭಾಗವಹಿಸಿ ವಚನಾನಂದ ಶ್ರೀಗಳನ್ನು ಉಚ್ಚಾಟನೆ ಮಾಡುವ ನಿರ್ಣಯ ಕೈಗೊಂಡಿದ್ದಾರೆ. ಈ ಬಗ್ಗೆ ಟ್ರಸ್ಟಿಯಾದ ಬಸವರಾಜ್ ದಿಂಡೂರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಟ್ರಸ್ಟ್ನ ಈ ನಿರ್ಧಾರ ಖಂಡಿಸಿರುವ ಮಠದ ಕೆಲ ಭಕ್ತರು ಧರ್ಮದರ್ಶಿಗಳಿಗೆ ಚಪ್ಪಲಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಈ ಬಗ್ಗೆ ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಭಕ್ತರು ಹಾಗೂ ದೇವರ ನಿರ್ಧಾರಕ್ಕೆ ಬಿಟ್ಟಿದ್ದೇವೆ ಎಂದಿದ್ದಾರೆ.
ಮೂರು ಕೋಟಿ ಅವ್ಯವಹಾರ ಆರೋಪ
ಹರಿಹರದ ಪಂಚಮಸಾಲಿ ಪೀಠದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರ ನೀಡಿದ ಅನುದಾನದಲ್ಲಿ 3 ಕೋಟಿಗೂ ಅಧಿಕ ಅವ್ಯವಹಾರ ನಡೆದಿದ್ದು, ಈ ಕುರಿತು ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹ ವ್ಯಕ್ತವಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಹರ ಗುರುಪೀಠದ ಆವರಣದಲ್ಲಿ ಭಕ್ತರು ನಡೆಸಿದ ಲೆಕ್ಕ ಕೊಡಿ ಚಳವಳಿ ನಡೆಸುತ್ತಿದ್ದರು.
2008 ರಲ್ಲಿ ಪೀಠ ಸ್ಥಾಪಿಸಲಾಯಿತು, ಪೀಠದ ಜಾಗ ಖರೀದಿಸಲು ಬಳ್ಳಾರಿಯ ಸೋಮಶೇಖರ ರೆಡ್ಡಿ ಧನ ಸಹಾಯ ನೀಡಿದ್ದಾರೆ. ರಾಜ್ಯದ 31 ಜಿಲ್ಲೆಗಳ ಸಮಾಜ ಬಂಧುಗಳು, ನೌಕರರು, ರೈತರು ಕೋಟ್ಯಂತರ ರೂ. ದೇಣಿಗೆ ನೀಡಿದ್ದಾರೆ. ಹಣ ನೀಡಿರುವ ನಾವು ಲೆಕ್ಕ ಕೇಳುತ್ತಿದ್ದೇವೆ. ಲೆಕ್ಕ ನೀಡಬೇಕಾಗಿರುವ ಪ್ರಧಾನ ಧರ್ಮದರ್ಶಿಗಳು ನಾಲ್ಕುಗೋಡೆಗಳ ಮಧ್ಯದಲ್ಲಿಯೇ ಲೆಕ್ಕ ನೀಡಿದ್ದರೆ ಎಲ್ಲವೂ ಸರಿಹೋಗುತ್ತಿತ್ತು. ಅದನ್ನು ಬಿಟ್ಟು ಅವರು ಆಡಳಿತಾಧಿಕಾರಿಡಾ.ರಾಜಕುಮಾರ, ದಾಸೋಹ ಸಮಿತಿ ಅಧ್ಯಕ್ಷ ವಕೀಲ ಪ್ರಕಾಶ ಪಾಟೀಲ ಅವರ ಮೇಲೆ ಹಲ್ಲೆನಡೆಸಿದ್ದಲ್ಲದೆ, ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಮಠದಿಂದ ಹೊರಹಾಕುತ್ತೆವೆಂದು ಹೇಳಿಕೆ ನೀಡಿದ್ದ ಕಾರಣ, ಧರ್ಮದರ್ಶಿಗಳ ವಿರುದ್ಧ ಲೆಕ್ಕ ಕೊಡಿ ಚಳವಳಿ ಆರಂಭಿಸಿದ್ದೇವೆ.’’ ಎಂದು ಗಡಿನಾಡು ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಇತ್ತೀಚೆಗೆ ಪ್ರಶ್ನೆ ಮಾಡಿದ್ದರು.
ಆರೋಪ ಸತ್ಯಕ್ಕೆ ದೂರ ಎಂದಿದ್ದ ವಚನಾನಂದಶ್ರೀ
‘ 2018 ರಲ್ಲಿ ನಾನು ಪೀಠಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಒಂದು ರೂಪಾಯಿ ಹಣಕಾಸಿನ ವ್ಯವಹಾರದಲ್ಲಿ ಭಾಗಿಯಾಗಿಲ್ಲ.’’ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಸ್ಪಷ್ಟಪಡಿಸಿದ್ದರು. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸ್ವಾಮೀಜಿಗಳು, ‘‘ಹಣದ ಚೆಕ್ಗಳಿಗೆ ಸಹಿ ಹಾಕಿಲ್ಲ. ಹಣಕಾಸಿನ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಇಲ್ಲಿಂದ ಬೆಂಗಳೂರಿನ ಶ್ವಾಸಪೀಠಕ್ಕೆ ಹಣವನ್ನು ಸಾಗಿಸಿದ್ದಾರೆಂದು ಕೆಲವರು ಆರೋಪಿಸಿದ್ದಾರೆ, ಅದು ಸತ್ಯಕ್ಕೆ ದೂರವಾದ ವಿಷಯ. ಶ್ವಾಸ ಯೋಗ ಪೀಠದಿಂದಲೇ ಇಲ್ಲಿಗೆ ಹಣ ತರಿಸಿದ್ದೇನೆ. ಅದಕ್ಕೆ ಬ್ಯಾಂಕ್ ದಾಖಲೆಗಳಿವೆ’ ಎಂದು ತಿಳಿಸಿದ್ದರು.
ಪೀಠದ ಧರ್ಮಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೂ, ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿಯೇ ಶ್ರಮಿಸುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪೀಠದ ಹಾಗೂ ನನ್ನ ಕುರಿತು ಬಂದಿರುವ ದೂರುಗಳು ಸತ್ಯಕ್ಕೆ ದೂರ’ ಎಂದು ಸ್ವಾಮೀಜಿ ಹೇಳಿದ್ದರು.

Comments
Post a Comment