ಲೋಕಾಯುಕ್ತ ಬಲೆಗೆ ಬಿತ್ತು ಮೀನುಗಾರಿಕೆ ಇಲಾಖೆಯ ದೊಡ್ಡ ತಿಮಿಂಗಲ; ಉಪ ನಿರ್ದೇಶಕ ಶಿವಣ್ಣನ ಮನೇಲಿ ಕೋಟಿ, ಕೋಟಿ ಆಸ್ತಿ!
ಬಳ್ಳಾರಿಯ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ, ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿದ್ದು, ಬೇನಾಮಿ ಆಸ್ತಿಗಳ ಬಗ್ಗೆಯೂ ತನಿಖೆ ಮುಂದುವರೆದಿದೆ.
ಬಳ್ಳಾರಿ (ಏ.07): ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರೆದಿದ್ದು, ಗಣಿ ನಾಡು ಬಳ್ಳಾರಿಯಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ನಸುಕಿನ ಜಾವವೇ ಶಿವಣ್ಣ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು, ಆಸ್ತಿ ವಿವರಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅಧಿಕಾರಿಯೊಬ್ಬರು ತನ್ನ ಅವಧಿಯಲ್ಲಿ ಎಷ್ಟು ಪ್ರಮಾಣದ ಆಸ್ತಿ ಮಾಡಿದ್ದಾರೆ ಎಂಬುದು ಈಗ ಬಯಲಾಗಿದೆ.
ಆಸ್ತಿಯ ವಿವರಗಳು:
ಲೋಕಾಯುಕ್ತ ದಾಳಿಯ ವೇಳೆ ಪತ್ತೆಯಾದ ಆಸ್ತಿಗಳ ಪಟ್ಟಿ ಬೆಟ್ಟದಷ್ಟಿದೆ. ಬಳ್ಳಾರಿ ನಗರವೊಂದರಲ್ಲೇ ಶಿವಣ್ಣ ಅವರು ಬರೋಬ್ಬರಿ 14 ಸೈಟುಗಳನ್ನು ಹೊಂದಿದ್ದಾರೆ. ಇದಲ್ಲದೆ ಬಳ್ಳಾರಿ ನಗರದ ವಿವಿಧ ಬಡಾವಣೆಗಳಲ್ಲಿ 3 ಐಷಾರಾಮಿ ಮನೆಗಳು ಪತ್ತೆಯಾಗಿವೆ. ಇನ್ನು ಕೃಷಿ ಭೂಮಿಯ ವಿಷಯಕ್ಕೆ ಬಂದರೆ, ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು 44 ಎಕರೆ ಜಮೀನು ಇರುವುದು ದಾಖಲೆಗಳಿಂದ ದೃಢಪಟ್ಟಿದೆ.
ಚಿನ್ನ, ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್:
ಮನೆಯಲ್ಲಿ ನಡೆಸಿದ ಶೋಧದ ವೇಳೆ 600 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಮನೆಯಲ್ಲೇ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದು, ಒಟ್ಟು 8.5 ಲಕ್ಷ ರೂಪಾಯಿ ನಗದನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ. ಇದರ ಜೊತೆಗೆ, ಶಿವಣ್ಣ ಅವರ ಬ್ಯಾಂಕ್ ಖಾತೆಯಲ್ಲಿದ್ದ 20 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಬೇನಾಮಿ ಆಸ್ತಿಯ ಶಂಕೆ:
ಕೇವಲ ಇಷ್ಟೇ ಅಲ್ಲದೆ, ಶಿವಣ್ಣ ಅವರು ತಮ್ಮ ಕುಟುಂಬಸ್ಥರು ಹಾಗೂ ಇತರರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಗಳನ್ನು ಮಾಡಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಕಚೇರಿ ಕೆಲಸದಲ್ಲಿ ಭ್ರಷ್ಟಾಚಾರ ನಡೆಸಿ, ಅಕ್ರಮ ಮಾರ್ಗದ ಮೂಲಕ ಈ ಹಣ ಸಂಪಾದನೆ ಮಾಡಿರಬಹುದು ಎಂಬ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ. ಮನೆಯಲ್ಲಿ ಸಿಕ್ಕಿರುವ ಹಲವು ಪ್ರಮುಖ ದಾಖಲೆಗಳು ಮತ್ತು ಡೈರಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Comments
Post a Comment