ದಾವಣಗೆರೆ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಸಿಬ್ಬಂದಿಯ ಬ್ಯಾಂಕ್ ವಹಿವಾಟು ಕಂಡು ಅಧಿಕಾರಿಗಳೇ ಶಾಕ್!
ದಾವಣಗೆರೆ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಸಿಬ್ಬಂದಿಯ ಬ್ಯಾಂಕ್ ವಹಿವಾಟು ಕಂಡು ಅಧಿಕಾರಿಗಳೇ ಶಾಕ್!
ದಾವಣಗೆರೆ: ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ಮಹಾನಗರ ಪಾಲಿಕೆಯ ವಲಯ-1ರ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ನಡೆಸಿದ್ದಾರೆ. ಇ-ಸ್ವತ್ತು ಸೇರಿದಂತೆ ವಿವಿಧ ನಾಗರಿಕ ಸೇವೆಗಳನ್ನು ಒದಗಿಸಲು ಲಂಚ ಪಡೆಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಲಂಚಬಾಕ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ!
ಬಹಳ ದಿನಗಳಿಂದ ಪಾಲಿಕೆಯ ವಲಯ-1ರ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಈ ದೂರಿನ ಗಾಂಭೀರ್ಯತೆಯನ್ನು ಅರಿತ ಲೋಕಾಯುಕ್ತ ಅಧಿಕಾರಿಗಳ ಎಂಟು ಮಂದಿಯ ತಂಡ ಕಚೇರಿಗೆ ನುಗ್ಗಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ದಾಳಿಯ ವೇಳೆ ಪ್ರತಿಯೊಬ್ಬ ಸಿಬ್ಬಂದಿಯ ಕಾರ್ಯವೈಖರಿಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.
ಬ್ಯಾಂಕ್ ಅಕೌಂಟ್ ನೋಡಿ ಅಧಿಕಾರಿಗಳು ದಂಗು!
ದಾಳಿಯ ವೇಳೆ ಸಿಬ್ಬಂದಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ ಲೋಕಾಯುಕ್ತ ಅಧಿಕಾರಿಗಳಿಗೆ ಅಚ್ಚರಿಯ ಸಂಗತಿಗಳು ಕಾದಿದ್ದವು. ಸಿಬ್ಬಂದಿಯ ವೇತನಕ್ಕಿಂತ ಹೆಚ್ಚಿನ ಮೊತ್ತದ ಹಣ ಖಾತೆಗಳಲ್ಲಿ ವಹಿವಾಟು ಆಗಿರುವುದು ಪತ್ತೆಯಾಗಿದೆ. ಈ ವೇಳೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು, "ನಿಮ್ಮ ಸಂಬಳ ಎಷ್ಟು? ನಿಮ್ಮ ಖಾತೆಯಲ್ಲಿ ಇಷ್ಟೊಂದು ಹಣ ಎಲ್ಲಿಂದ ಬಂತು? ದುಡಿಮೆಗಿಂತ ಹೆಚ್ಚಿನ ವಹಿವಾಟು ಹೇಗೆ ನಡೆಯುತ್ತಿದೆ?" ಎಂದು ಪ್ರಶ್ನಿಸಿ ಬೆವರಿಳಿಸಿದ್ದಾರೆ.
ದಾಖಲೆಗಳ ವಶ:
ಪಾಲಿಕೆ ಕಚೇರಿಯಲ್ಲಿದ್ದ ಹಲವು ಕಡತಗಳು ಹಾಗೂ ಕಂಪ್ಯೂಟರ್ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇ-ಸ್ವತ್ತು ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ಅದಕ್ಕಾಗಿ ಪಡೆಯಲಾಗುತ್ತಿರುವ ಲಂಚದ ಬಗ್ಗೆ ತನಿಖೆ ತೀವ್ರಗೊಂಡಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ.
ದಾವಣಗೆರೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿರುವ ಈ ದಿಢೀರ್ ದಾಳಿ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದೆ.


Comments
Post a Comment