BREAKING: ಪ್ರಮಾಣವಚನ ಸ್ವೀಕಾರದ ಬಳಿಕ ನೂತನ ಸಿಎಂ ವಿಜಯ್ ಮೊದಲ ಮಾತು: ನಿಜವಾದ ಜಾತ್ಯಾತೀತ, ಸಮಾಜವಾದಿ ಆಡಳಿತ ಇಂದಿನಿಂದ ಶುರುವಾಗಿದೆ
ಚೆನ್ನೈ: ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನಟ, ತಮಿಳಿಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್, ತಮ್ಮ ಗೆಲುವನ್ನು ಇಡೀ ತಮಿಳುನಾಡಿನ ಜನತೆಗೆ ಅರ್ಪಿಸಿದ್ದಾರೆ. ಇದು ನನ್ನೊಬ್ಬನ ಗೆಲುವಲ್ಲ, ನಿಮ್ಮೆಲ್ಲರ ಗೆಲುವು. ಇಂದಿನಿಂದ ನಿಜವಾದ ಜಾತ್ಯಾತೀತ, ಸಮಾಜವಾದಿ ಆಡಳಿತ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಚೆನ್ನೈ ನ ನೆಹರು ಕ್ರೀಡಾಂಗಣದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇದು ನನ್ನ ಗೆಲುವಲ್ಲ ಜನತೆಯ ಗೆಲುವು. ಈ ಪ್ರಕ್ರಿಯೆಯಲ್ಲಿ ನಾನು ಅನುಭವಿಸಿದ ಅವಮಾನ ಪಕ್ಕಕ್ಕಿಡುತ್ತೇನೆ. ನನ್ನಿಂದಾಗಿ ಅವಮಾನ ಅನುಭವಿಸಿದ ಎಲ್ಲರೂ ನನ್ನವರೇ. ನಿಮ್ಮೆಲ್ಲರಿಂದಲೇ ನಾನಿಂದು ಮುಖ್ಯಮಂತ್ರಿಯಾಗಿದ್ದೇನೆ. ನಿಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು ಎಂದರು.
ಕಾಂಗ್ರೆಸ್ ನಾಯಕ, ನನ್ನ ಸಹೋದರ ರಾಹುಲ್ ಗಾಂಧಿಯವರಿಗೂ ಧನ್ಯವಾದ. ವಿಸಿಕೆ ಹಾಗೂ ಎಡಪಕ್ಷಗಳ ನಾಯಕರಿಗೂ ಧನ್ಯವಾದ. ಈ ಸಂದರ್ಭದಲ್ಲಿ ನನ್ನ ಜೊತೆ ಇರುವ ಎಲ್ಲರಿಗೂ ಧನ್ಯವಾದ. ಎಲ್ಲರೂ ಆತ್ಮವಿಶ್ವಾದಿಂದ ಇರಿ ಗೆಲುವು ನಮ್ಮದೇ ಆಗಲಿದೆ. ಇಷ್ಟು ಕೋಟಿ ಜನರು ನನ್ನೊಂದಿಗೆ ಇರುವಾಗ ನಾನು ಯಾವುದಕ್ಕೂ ಹೆದರುವುದಿಲ್ಲ. ಏನೇ ಸಮಸ್ಯೆ ಬಂದರೂ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಕೊಟ್ಟಿರುವ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುತ್ತೇನೆ. ನನಗೆ ಸ್ವಲ್ಪ ಕಾಲಾವಾಕಾಶಗಳನ್ನು ಕೊಡಿ. 10 ಲಕ್ಷ ಕೋಟಿ ಸಾಲವನ್ನು ನನ್ನ ಮೇಲೆ ಹೊರಿಸಿದ್ದಾರೆ. ಹಿಂದಿನ ಎಂ.ಕೆ.ಸ್ಟಾಲಿನ್ ಸರ್ಕಾರ ರಾಜ್ಯದ ಖಜಾನೆಯನ್ನು ಖಾಲಿ ಮಾಡಿದೆ. ತಮಿಳುನಾಡು ಆರ್ಥಿಕವಾಗಿ ದುಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ನಾನು ಬಂದಿದ್ದೇನೆ. ರಾಜ್ಯದ ಆರ್ಥಿಕತೆ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಪಾರದರ್ಶಕವಾಗಿ ಆಡಳಿತ ನಡೆಸಲಾಗುವುದು. ಇನ್ಮುಂದೆ ಆಡಳಿತದಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲಾ ಅಂಶಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.

Comments
Post a Comment